ಮಂದಾರ್ತಿ ಮೇಳಕ್ಕೆ 13,300 ಸೇವೆಯಾಟ ಬುಕ್ಕಿಂಗ್: ವರ್ಷಪೂರ್ತಿ ಆಟ ಆಡಿಸಲು ಚಿಂತನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 8 , 2013
|
ಮಂದಾರ್ತಿ , ಆಗಸ್ಟ್ 8 , 2013
|
ಮಂದಾರ್ತಿ ಮೇಳಕ್ಕೆ 13,300 ಸೇವೆಯಾಟ ಬುಕ್ಕಿಂಗ್: ವರ್ಷಪೂರ್ತಿ ಆಟ ಆಡಿಸಲು ಚಿಂತನೆ
ಮಂದಾರ್ತಿ :
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಐದು ಮೇಳಗಳ ವತಿಯಿಂದ ನಡೆಯುವ 2013-14ನೇ ಸಾಲಿನ ಯಕ್ಷಗಾನ ಪ್ರದರ್ಶನದ ಅಂಗವಾಗಿ ಗುರುವಾರ ದೇವಳದಲ್ಲಿ ಈ ವರ್ಷದ ಸೇವಾದಾರರಿಂದ ವೀಳ್ಯ ಸ್ವೀಕರಿಸಲಾಯಿತು. ಕಾಲಮಿತಿಯ ಯಕ್ಷಗಾನ ಪ್ರದರ್ಶನ ಬೇಕೇ, ಬೇಡವೇ ಎನ್ನುವ ಅಭಿಪ್ರಾಯ ಸಂಗ್ರಹದ ನಿಟ್ಟಿನಲ್ಲಿ ಬುಧವಾರ ಸಮಸ್ತರ ಸಭೆ, ಆಡಳಿತ ಮಂಡಳಿ ಸಭೆ ನಡೆದಿದ್ದು ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಸುವ ಆಯ್ಕೆ ಜವಾಬ್ದಾರಿಯನ್ನು ಹರಕೆ, ಸೇವಾದಾರರಿಗೇ ವಹಿಸಲಾಗಿದೆ.
ಉಡುಪಿ ಜಿಲ್ಲೆಯ ಬಾರ್ಕೂರಿನಿಂದ 8 ಕಿ.ಮೀ. ದೂರದಲ್ಲಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವರು ಯಕ್ಷಗಾನ ಹರಕೆ ಪ್ರಿಯೆ. ಮೇಳಕ್ಕೆ 600 ವರ್ಷಗಳ ಪರಂಪರೆ ಇದೆ. ಭಕ್ತರ ಸಂಕಷ್ಟ ಪರಿಹಾರದ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಯಕ್ಷಗಾನ ಸೇವೆಯೂ ಒಂದಾಗಿದೆ. ಬೆಳಕಿನ ಸೇವೆಯ ಖ್ಯಾತಿ ಇದೆ.
ಮೇಳ ಹೊರಡುವ ದಿನ ಪ್ರಥಮ ವೇಷ ಹಾಕುವಾಗ, ಬಾರಾಳಿ ಗಣಪತಿ ದೇವಾಲಯದಲ್ಲಿ ಗೆಜ್ಜೆ ಧರಿಸಿ, ವೇಷ ಹಾಕಿಕೊಂಡು ಬಂದು, ಬಳಿಕ ಮಂದಾರ್ತಿಯಲ್ಲಿ ದೇವರ ಸೇವೆ ಆಟ ಆಡುವ ಪದ್ಧತಿ ಇದೆ. ಮೇಳದ ತಿರುಗಾಟ ಪ್ರತಿ ವರ್ಷ ಧನುರ್ಮಾಸದ ಶುಭದಿನದಂದು ಆರಂಭ.
ಮೇಳದ ವೈಶಿಷ್ಟ್ಯ: ಹಿಂದೆ ಮೇಳವನ್ನು ಏಲಂ ಮೂಲಕ ನಡೆಸುತ್ತಿದ್ದರೆ, 1987-88ರಿಂದ ದೇವಸ್ಥಾನದ ಮೂಲಕವೇ ನಡೆಸಲು ಆಡಳಿತ ಮಂಡಳಿ ನಿಧರ್ರಿಸಿದ್ದು 2ನೇ ಮೇಳವನ್ನು 92-93, 3ನೇ ಮೇಳವನ್ನು 2000-01, 4ನೇ ಮೇಳವನ್ನು 2001- 02 ಮತ್ತು 2010-11ರಲ್ಲಿ 5ನೇ ಮೇಳವನ್ನು ಪ್ರಾರಂಭಿಸಲಾಯಿತು.
ಕ್ಷೇತ್ರದ ಆಟಕ್ಕೆ ಬಹಳಷ್ಟು ಡಿಮ್ಯಾಂಡ್. 2031-32ನೇ ಸಾಲಿನ ತನಕ ಭಕ್ತಾದಿಗಳಿಂದ ಐದು ಮೇಳಗಳ ಯಕ್ಷಗಾನ ಪ್ರದರ್ಶನದ ದಾಖಲೆಯ 13,300 ಸೇವೆಯಾಟ ಈಗಾಗಲೇ ಮುಂಗಡ ಬುಕ್ಕಿಂಗ್ ಆಗಿದೆ. ವರ್ಷದಲ್ಲಿ ಸುಮಾರು 930 ಹರಕೆ ಆಟಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ 28 ಕಟ್ಟು ಕಟ್ಟಳೆ ಆಟ, 100 ಕಾಯಂ ಹಾಗೂ ಉಳಿದವು ಹರಕೆ ಸೇವೆಯಾಟ ಗಳು. ಭಕ್ತರು ಹರಕೆಯಾಟವನ್ನು ತಾವು ಇಚ್ಛಿಸಿದ ಸ್ಥಳದಲ್ಲಿ ಆಟ ಆಡಿಸಲು ಅನುಕೂಲವಾಗುವಂತೆ ಐದು ವಾಹನ (ಬಸ್)ಗಳನ್ನು ಕ್ಷೇತ್ರವು ಹೊಂದಿದೆ.
ಯಕ್ಷಗಾನ ಕಲಾವಿದರು ರಾಮಾಯಣ, ಮಹಾಭಾರತದಲ್ಲಿ ಬರುವ ನಾನಾ ಪ್ರಸಂಗ (ಕಥಾನಕ)ಗಳಲ್ಲದೆ, ಶ್ರೀ ದೇವಿಯ ಸ್ಥಳ ಪುರಾಣದ ಕಥೆಗಳನ್ನು ಯಕ್ಷಗಾನದ ಮೂಲಕ ಆಡಿ ತೋರಿಸುತ್ತಾರೆ. ಒಂದು ಮೇಳದಲ್ಲಿ ಒಟ್ಟು 45 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಾವಿದರ ಕೊರತೆ ಮತ್ತು ಯಕ್ಷಗಾನ ಸೇವಾರ್ಥಿಗಳ ಸೇವೆಯ ಸಂಖ್ಯೆ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಮಳೆಗಾಲದಲ್ಲಿ ಕೂಡ ದೇವಳದ ಸ್ಥಳದಲ್ಲಿಯೇ ಸೇವೆ ಮುಖಾಂತರ ವರ್ಷಪೂರ್ತಿ ಸೇವೆ ನಡೆಸಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ದೇವಳದ ಆಡಳಿತ ಮಂಡಳಿ ಈ ಬಗ್ಗೆ ಚಿಂತನೆ ನಡೆಸಿದೆ.
*ಕಾಲಮಿತಿಯ ಯಕ್ಷಗಾನ ಪ್ರದರ್ಶನ ಆಯೋಜನೆ ಸೇವಾದಾರರಿಗೇ ಬಿಟ್ಟ ವಿಚಾರ. ಒಂದು ಮೇಳಕ್ಕಾಗುವಷ್ಟು ಕಾಲಮಿತಿಯ ಯಕ್ಷಗಾನ ಪ್ರದರ್ಶನದ ಅವಕಾಶ ಸಿಕ್ಕರೆ ಮಾತ್ರ ಆಟವಾಡಿಸುವುದು ಸಾಧ್ಯ. ಕಲಾವಿದರ ಕೊರತೆಯಿಂದಾಗಿ ದೇವಳದಲ್ಲಿ ಜೂನ್ನಿಂದ ನವೆಂಬರ್ ತನಕ ಉಚಿತ ಯಕ್ಷಗಾನ ತರಬೇತಿ ವ್ಯವಸ್ಥೆ ಆಯೋಜಿಸಲಾಗಿದೆ. - ಎಚ್. ಧನಂಜಯ ಶೆಟ್ಟಿ(ಆಡಳಿತ ಮಂಡಳಿಯ ಪರವಾಗಿ) ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ.
|
|
|